Photos of R S Iyer Tumkur

*ಆರ್.ಎಸ್.ಅಯ್ಯರ್ ಫೋಟೋಗಳು :- http://rsiyertumkur.blogspot.com *ಡಿವಿಜಿ ನೆನಪು ಕಾರ್ಯಕ್ರಮ:-https://sarasdvgnenapu.blogspot.com *ವಿಶ್ವನಾಥನ್ ಪತ್ರಗಳು https://vishwanathanletters.blogspot.com

Sunday 4 February 2024

Beauty of Letters - ಪತ್ರ ಸೌಂದರ್ಯ

ಈಗ ಇ-ಮೇಲ್, ವಾಟ್ಸಾಪ್, ಮೊಬೈಲ್ ಯುಗ. ಎಲ್ಲವೂ ಕೈಬೆರಳ ತುದಿಯಲ್ಲೇ ಮುಗಿದುಹೋಗುತ್ತದೆ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಜಗತ್ತಿನ ಯಾವುದೇ ಮೂಲೆಗಾದರೂ ಸಂದೇಶ ರವಾನೆಯಾಗಿಬಿಡುತ್ತದೆ. ಆದರೆ ಮೂರು ದಶಕಗಳ ಮುಂಚೆ ಇವುಗಳಾವುವೂ ಇರಲಿಲ್ಲ. ಆಗ ಏನಿದ್ದರೂ. ಎಲ್ಲವೂ ಪತ್ರ ವ್ಯವಹಾರದಲ್ಲೇ- ಕೈಬರಹದಲ್ಲೇ ಸಾಗಬೇಕಿತ್ತು. ಯೋಚಿಸಿ, ಆಲೋಚಿಸಿ ಬರೆಯಬೇಕಾಗಿತ್ತು. ಅಂಚೆ ಇಲಾಖೆ ಮೂಲಕವೇ ಪತ್ರ ರವಾನೆ ಹಾಗೂ ಪತ್ರ ಸ್ವೀಕಾರದ ವ್ಯವಸ್ಥೆಯಿತ್ತು. "ಇಂದು ಪೋಸ್ಟ್ ಮನ್ ಬಂದರೆ ? ಏನಾದರೂ ಲೆಟರ್ ಬಂತೇ?" ಎಂದು ಕೌತುಕದಿಂದ ಕಾಯಬೇಕಾಗಿತ್ತು.  ಕ್ಷೇಮ-ಕುಶಲೋಪರಿಯೊಂದಿಗೆ ಪತ್ರ ಬರೆಯಲೊಂದು ವಿಧಾನವೂ ಇತ್ತು. ಆ ಭಾವ ವಿನಿಮಯದ ಸೌಂದರ್ಯವೇ ಅದ್ಭುತ ಸ್ವರೂಪದ್ದಾಗಿತ್ತು. ಆ ಕಾಲದಲ್ಲಿ ಅನೇಕ ಮಹನೀಯರು, ಮಿತ್ರರು, ನಮ್ಮ ತಂದೆಯವರು, ಬಂಧುಗಳು, ಇತರರು ಬರೆದಿದ್ದ ಕೆಲವು ಪತ್ರಗಳು ನನ್ನ ಸಂಗ್ರಹದಲ್ಲಿವೆ. ಅವುಗಳನ್ನೋದಿಗಾಗಲೆಲ್ಲ ಉಂಟಾಗುವ ಭಾವನೆಗಳು ಅವರ್ಣನೀಯ. ಅಂತಹ ಕೆಲವು ಪತ್ರಗಳನ್ನು (ಈಗಿನ ಪೀಳಿಗೆಗೆ ಆ "ಪತ್ರ ಸೌಂದರ್ಯ"ದ ಮಹತ್ವ ಅರಿವಿಗೆ ಬರಲೆಂಬ ಆಶಯದಿಂದ) ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

 - ಆರ್.ಎಸ್.ಅಯ್ಯರ್, ತುಮಕೂರು

-------------------------------------------------------------------------

ಹಿಮಾಲಯದ ಪ್ರಸಿದ್ಧ ಪುಣ್ಯಕ್ಷೇತ್ರ ಗಳಲ್ಲೊಂದಾದ ಹೃಷಿಕೇಶದಲ್ಲಿ ನೆಲೆಸಿ ಯೋಗ ಹಾಗೂ ಅಧ್ಯಾತ್ಮದಿಂದ ಆ ಕಾಲದಲ್ಲೇ ಜಗದ್ವಿಖ್ಯಾತರಾಗಿದ್ದ ಪ.ಪೂ. ಶ್ರೀ ಸ್ವಾಮಿ ಶಿವಾನಂದಜಿ ಅವರಿಗೆ 1958 ರಲ್ಲಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರು ಒಂದು ಪತ್ರ ಬರೆದಿದ್ದರಂತೆ. ಆ ಪತ್ರಕ್ಕೆ ಸ್ವಾಮೀಜಿಯವರು ಪ್ರತ್ಯುತ್ತರ ರೂಪದಲ್ಲಿ ಬರೆದಿರುವ ಅಮೂಲ್ಯ ಹಾಗೂ ಸಾರ್ವತ್ರಿಕ ಸಂದೇಶವುಳ್ಳ ಪತ್ರವಿದು.



___________________________________________

Swamy Purushottamanandaji Letter




-----------------------------------------------------------

Swamy Purushottamanandaji letter



**********************************************

Sri Swamy Purushottamanandaji's Letter






***********************************************

Sri Swamy Purushottamanandaji's Letter


________________________________________

KSRTC M.D. Letter

ತುಮಕೂರು ನಗರದಲ್ಲಿ 2011 ರಲ್ಲಿ ಆರಂಭವಾದ "ಸಿಟಿ ಬಸ್" ಸೌಲಭ್ಯದ ಬಗ್ಗೆ ನಾನೊಂದು ವಿಶೇಷ ಲೇಖನ ಬರೆದಿದ್ದೆ. ಅದನ್ನೋದಿದ ಕೆ.ಎಸ್.ಆರ್.ಟಿ.ಸಿ.ಯ  ಆಗಿನ  ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೌರವ್ ಗುಪ್ತ I.A.S. ಅವರು ಅಂದೇ E-Mail ಮೂಲಕ ನೀಡಿದ್ದ ಪ್ರತಿಕ್ರಿಯೆ ಇದು. 

******************************************

ಪ.ಪೂ. ಶ್ರೀ ಸ್ವಾಮಿ ಪುರುಷೋತ್ತಮಾನಂದಜಿಯವರ ಆ ಒಂದು ಪತ್ರ...











*********************************************

R S S ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣನವರ ಪತ್ರ

1992 ರ ಆ ಅಮೂಲ್ಯ "ಪ್ರಶಸ್ತಿ"...
---------------------------

1992 ರ ಜನವರಿಯಲ್ಲಿ ತುಮಕೂರಿನ ಗೊಲ್ಲಹಳ್ಳಿಯ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲೊಂದು ಕಾರ್ಯಕ್ರಮ. ಆರ್.ಎಸ್.ಎಸ್. ನ ಹಿರಿಯ ಪ್ರಚಾರಕರಾದ ಶ್ರೀ ಸು.ರಾಮಣ್ಣನವರ ಬೌದ್ಧಿಕ್. ವರದಿಗೆಂದು ನಾನು ಹೋಗಿದ್ದೆ. ಶ್ರೀ ಸು.ರಾಮಣ್ಣನವರು ಅದ್ಭುತ ಚಿಂತಕರಷ್ಟೇ ಅಲ್ಲದೆ ಪ್ರಖರ ವಾಗ್ಮಿಗಳೂ ಹೌದು. ಅಷ್ಟೇ ಅಲ್ಲ, ಕಂಚಿನ ಕಂಠದಿಂದ ಸುಶ್ರಾವ್ಯವಾಗಿ ಗೀತೆಗಳನ್ನೂ ಹಾಡಬಲ್ಲವರಾಗಿದ್ದರು. ಅಂದು ಅವರು ಅತ್ಯಂತ ವಿಚಾರಪೂರಿತ ಭಾಷಣ ಮಾಡಿದ್ದರು. ಅದನ್ನು ನಾನು ಸುದೀರ್ಘವಾಗಿಯೇ ವರದಿ ಮಾಡಿದ್ದೆ. ಸದರಿ ಸುದ್ದಿ ಪ್ರಕಟಗೊಂಡಿದ್ದ ಪತ್ರಿಕೆಯನ್ನು ಅಂಚೆ ಮೂಲಕ ಬೆಂಗಳೂರಿನ "ಕೇಶವಕೃಪ"ಕ್ಕೆ ಕಳಿಸಿದ್ದೆ. ಅದನ್ನೋದಿದ ಬಳಿಕ ಶ್ರೀ ಸು.ರಾಮಣ್ಣನವರು ಪೋಸ್ಟ್ ಕಾರ್ಡ್ ನಲ್ಲಿ ತಮ್ಮ ಪ್ರತಿಕ್ರಿಯೆ ಬರೆದಿದ್ದರು. ಅವರ ಆ ಪತ್ರವೇ ಒಂದು "ಅತ್ಯಮೂಲ್ಯ ಪ್ರಶಸ್ತಿ" ಎನಿಸಿ ಹಾಗೆಯೇ ಸಂಗ್ರಹಿಸಿಟ್ಟಿದ್ದೆ. 32 ವರ್ಷಗಳ ಹಿಂದಿನ ಆ ಪತ್ರ ಫೈಲ್ ಒಂದರಲ್ಲಿ ಕಾಣಿಸಿತು.

ಇ-ಮೇಲ್, ಮೊಬೈಲ್, ವಾಟ್ಸಾಪ್ ಮೊದಲಾದ ಆಧುನಿಕ ತಂತ್ರಜ್ಞಾನದ ಭರಾಟೆಯ ಎದುರು, ಅದ್ಭುತ ಅನುಭೂತಿ ಉಂಟುಮಾಡುತ್ತಿದ್ದ ಆ "ಪತ್ರ ಸಂಸ್ಕೃತಿ"ಯೇ ಕಣ್ಮರೆಯಾಗಿರುವ ಈ ಹೊತ್ತಿನಲ್ಲಿ, ಈಗಿನವರಿಗೆ ಇಂತಹ "ಪತ್ರಬರಹ"ಗಳ ಪರಿಚಯ ಆಗಲೆಂಬ ಸದಾಶಯದಿಂದ ಇಲ್ಲಿ ಹಂಚಿಕೊಂಡಿದ್ದೇನೆ.

-ಆರ್.ಎಸ್.ಅಯ್ಯರ್, ತುಮಕೂರು,








Tuesday 19 December 2023

ಪಾಲಿಕೆ ವ್ಯಾಪ್ತಿ ವಿಸ್ತರಣೆ ಅಪ್ರಸ್ತುತ - Facebook - 19-12-2023- Palike Limits Expansion









 




------------------




**********************************

ಪಾಲಿಕೆ ವ್ಯಾಪ್ತಿ ವಿಸ್ತರಣೆ ಅಪ್ರಸ್ತುತ

-------------------------------------
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಅಂದರೆ ಮಲ್ಲಸಂದ್ರದವರೆಗೆ ವಿಸ್ತರಣೆ ಮಾಡುವುದಾಗಿ ರಾಜ್ಯದ ಗೃಹ ಸಚಿವರೂ ಆಗಿರುವ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿರುವುದು ಅಪ್ರಸ್ತುತವಾಗಿದೆ. ಮೊದಲಿಗೆ ಈ ಕೆಳಕಂಡ 11 ಅಂಶಗಳ ಬಗ್ಗೆ ಚರ್ಚೆ ಆಗಲಿ.
1 ) ಪಾಲಿಕೆಯು ಈಗ 35 ವಾರ್ಡ್ ಗಳನ್ನು ಹೊಂದಿದೆ. ಈಗಿರುವ ವಾರ್ಡ್ ವ್ಯಾಪ್ತಿಗಳೇ ಅವೈಜ್ಞಾನಿಕವಾಗಿದೆ. ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬಡಾವಣೆಗಳನ್ನು ಜೋಡಿಸಲಾಗಿದೆ. ವಾರ್ಡ್ ಗಳ ಜನಸಂಖ್ಯೆಯಲ್ಲೂ ಅಂತರಗಳಿವೆ. ಒಂದು ದೊಡ್ಡದು, ಒಂದು ಚಿಕ್ಕದು ಎಂಬಂತಿವೆ.
2 ) ನಗರಸಭೆ ಇದ್ದಾಗ ಸುತ್ತಮುತ್ತಲಿನ ಸುಮಾರು 22 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿತ್ತು. ಮಹಾನಗರ ಪಾಲಿಕೆಯಾಗಿ ದಶಕ ಕಳೆದರೂ, ಹೊರವಲಯದ ವಾರ್ಡ್‌ ಗಳ ಅಭಿವೃದ್ಧಿ ಬಗೆಗಿನ ತಾರತಮ್ಯದ ಕೂಗು ಈಗಲೂ ಪಾಲಿಕೆ ಸಭೆಗಳಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ.
3) ವಾರ್ಷಿಕ ಸುಮಾರು 250 ಕೋಟಿ ರೂ. ಬಜೆಟ್ ಮಂಡಿಸುವ ಪಾಲಿಕೆಯು ಬಹುತೇಕ ಸರಕಾರಿ ಅನುದಾನವನ್ನೇ ಅವಲಂಬಿಸಿಕೊಂಡಿದೆ. ಸ್ವಯಂ ಸಂಪನ್ಮೂಲ ಕ್ರೋಢಿಕರಣದಲ್ಲಿ ಯಶಸ್ಸು ಸಾಧಿಸಲಾಗಿಲ್ಲ. ಒಂದು ಬೀದಿದೀಪ ಅಳವಡಿಕೆಗೂ ಪರಿತಪಿಸುವ ಸ್ಥಿತಿ ಇತ್ತು. ಅದೃಷ್ಟವಶಾತ್ ಒಂದು ಸಾವಿರ ಕೋಟಿ ರೂ.ಗಳ “ಸ್ಮಾರ್ಟ್ ಸಿಟಿ” ಯೋಜನೆ ಬಂದುದರಿಂದ, ತುಮಕೂರು ನಗರ ಬದಲಾವಣೆ ಕಂಡಿದೆ. ನಗರಾದ್ಯಂತ ಹಲವು ರಸ್ತೆಗಳು ಅಭಿವೃದ್ಧಿ ಆಗಿವೆ. ಬೀದಿದೀಪಗಳು ಅಳವಡಿಸಲ್ಪಟ್ಟಿವೆ. ಪಾರ್ಕ್ ಗಳು ಹೊಸರೂಪದಿಂದ ನಳನಳಿಸುತ್ತಿವೆ. ಅಕಸ್ಮಾತ್ “ಸ್ಮಾರ್ಟ್ ಸಿಟಿ” ಯೋಜನೆ ಇಲ್ಲದಿದ್ನರೆ ನಗರದಲ್ಲೊಂದು ಚರಂಡಿ ರಿಪೇರಿಯೂ ಪಾಲಿಕೆಗೆ ಕಷ್ಟವಾಗುತ್ತಿತ್ತು.
4 ) ಪಾಲಿಕೆ ಆಗುವಾಗ ಅಸ್ತಿತ್ವಕ್ಕೆ ತಂದಿದ್ದ ಮೂರು “ವಲಯ ಕಚೇರಿ”ಗಳನ್ನೂ ಮುಚ್ಚಲಾಗಿದೆ. “ವಾರ್ಡ್ ಸಮಿತಿ”ಗಳ ಅಸ್ತಿತ್ವ, ಕಾರ್ಯವೈಖರಿ ನಿಗೂಢವಾಗಿದೆ.
5 ) ಪಾಲಿಕೆಗೆ ಅದರದ್ದೇ ಆದ ಅಧಿಕಾರಿ-ನೌಕರರ ದೊಡ್ಡ ಜಾಲವೇ ಇರುತ್ತದೆ. ಅಂದರೆ ಸಿಬ್ಬಂದಿ ಸಂಖ್ಯೆ ಏರಿಕೆಯಾಗುತ್ತದೆ. ಆದರೆ ಈ ಪಾಲಿಕೆಯಲ್ಲಿ ಎಲ್ಲೋ ಕೆಲ ಪ್ರಮುಖ ಹುದ್ದೆಗಳಿಗೆ ಅಧಿಕಾರಿ-ನೌಕರರು ಪ್ರಭಾವ ಬೀರಿಕೊಂಡು ಬಂದು-ಹೋಗುತ್ತಿದ್ದಾರೆಯೇ ವಿನಃ, ನಿಗದಿತ ರೀತಿಯಲ್ಲಿ ಅವಕಾಶವಿರುವ ಎಲ್ಲ ಸಿಬ್ಬಂದಿಗಳ ನಿಯೋಜನೆಯೇ ಆಗಿಲ್ಲ.
6 ) ಪಾಲಿಕೆಯಾಗಿ ಬದಲಾದಾಗಿನಿಂದಲೂ ಪಾಲಿಕೆಯ ಆಡಳಿತದಲ್ಲಿ ದೊಡ್ಡ ಸುಧಾರಣೆಯೇನೂ ಆಗಿಲ್ಲ. ಅದರಲ್ಲೂ ಕಂದಾಯ ಶಾಖೆಯಂತೂ ಅನಿಯಂತ್ರಿತವೆಂಬ ದೂರು ನಿರಂತರ. ಕಂದಾಯ ಪಾವತಿಯ ದಾಖಲಾತಿಗಳ ನಿರ್ವಹಣೆ ಲೋಪದೋಷಗಳಿಂದಾಗಿ ತೆರಿಗೆ ಪಾವತಿಸುವ ಸಾರ್ವಜನಿಕರು ಪಡುತ್ತಿರುವ ವೇದನೆ, ಅಲೆದಾಟ, ಕಿರಿಕಿರಿ, ಸಂಕಟಗಳಂತೂ ಹೇರಳ. ಪಾಲಿಕೆಯ ಪ್ರತಿ ಸಭೆಯಲ್ಲೂ ದೂರು ಇದ್ದದ್ದೇ.
7 ) ಕಸ ವಿಲೇವಾರಿ ಈಗಲೂ ಕಗ್ಗಂಟು. ದಿನವೂ ಮನೆ-ಮನೆ ಕಸ ಸಂಗ್ರಹಿಸಬೇಕೆಂಬುದು ನಿಯಮ. ಆದರೆ ಕೆಲವು ವಾರ್ಡ್ ಗಳಲ್ಲಿ ಇದು ಜಾರಿಯಾಗುತ್ತಿಲ್ಲ. ವಾರಕ್ಕೆ ಮೂರು ಬಾರಿ ಮಾತ್ರ ಕಸ ಸಂಗ್ರಹ ಆಗುತ್ತಿದೆ. ನಗರಾದ್ಯಂತ ರಸ್ತೆ ಬದಿ ಕಸದ ರಾಶಿ ಬೀಳುತ್ತಲೇ ಇರುತ್ತದೆ. ರಾಜಕೀಯ ಪಕ್ಷಗಳ/ ವಿವಿಧ ಸಂಘಟನೆಗಳ ಫ್ಲೆಕ್ಸ್ ಹಾವಳಿ, ಬಂಟಿಂಗ್ಸ್ ಹಾವಳಿ ಅಸಹ್ಯಕರವಾಗಿದ್ದು, ನಗರದ ಸೌಂದರ್ಯವನ್ನೇ ಹಾಳುಮಾಡುತ್ತಿದೆ. ಆದರೂ ಪಾಲಿಕೆ ಅಸಹಾಯಕವಾಗಿದೆ.
8 ) ನಗರದ ಪ್ರಮುಖ ಬಡಾವಣೆಗಳಲ್ಲೇ ಇನ್ನೂ ಸಹಾ ಡಾಂಬರು ಕಾಣದ ಮಣ್ಣಿನ / ಜಲ್ಲಿ ಕಲ್ಲಿನ ರಸ್ತೆಗಳಿವೆ. ಇನ್ನು ಹೊರವಲಯದ ವಾರ್ಡ್ ಗಳ ಪರಿಸ್ಥಿತಿ ಹೇಗಿರಬಹುದು?
9 ) ನಗರಕ್ಕೆ ಹೊಂದಿಕೊಂಡಿರುವ ಬೆಳಗುಂಬ, ಮಂಚಕಲ್ ಕುಪ್ಪೆ, ಹಿರೇಹಳ್ಳಿ, ಗೂಳೂರು, ಅಂತರಸನಹಳ್ಳಿ, ಯಲ್ಲಾಪುರ, ಅರಕೆರೆ, ಕೋರಾದಂತಹ ಪ್ರಮುಖ ಸ್ಥಳಗಳನ್ನು ಬಿಟ್ಟು, ಕೇವಲ ಮಲ್ಲಸಂದ್ರದತ್ತ ಮಾತ್ರ ಪಾಲಿಕೆಯ ವಿಸ್ತರಣೆಗೆ ಕಣ್ಣಿಟ್ಟಿರುವುದು ಅತಾರ್ಕಿಕವಾಗಿದೆ.
10 ) ಹಿರೇಹಳ್ಳಿಯಲ್ಲಿ, ಸತ್ಯಮಂಗಲದಲ್ಲಿ, ವಸಂತನರಸಾಪುರದಲ್ಲಿ, ಅಂತರಸನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶಗಳಿದ್ದು, ಅಂತಹ ಪ್ರದೇಶಗಳನ್ನು ಸೇರ್ಪಡೆ ಮಾಡಿದರೆ, ಪಾಲಿಕೆಯ ಸಂಪನ್ಮೂಲ ಅಧಿಕವಾಗುವುದರಲ್ಲಿ ಸಂಶಯವಿಲ್ಲ. ಅವೆಲ್ಲ ಬಿಟ್ಟು ಕೇವಲ ಮಲ್ಲಸಂದ್ರದತ್ತ ಮಾತ್ರ ಎಂಬುದು ತಪ್ಪು ನಿರ್ಧಾರವಾಗುತ್ತದೆ.
11 ) ಇವೆಲ್ಲಕ್ಕೂ ಮಿಗಿಲಾಗಿ ಈಗ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿರುವ ಪ್ರದೇಶಗಳನ್ನು ತುಮಕೂರು ಪಾಲಿಕೆ ವ್ಯಾಪ್ತಿಗೆ ತರುವುದಾದಲ್ಲಿ, ಗ್ರಾಮಾಂತರ ಕ್ಷೇತ್ರದ ನಕ್ಷೆಯಲ್ಲಿ ಬದಲಾಗುತ್ತದೆಯೇ?
-ಆರ್.ಎಸ್.ಅಯ್ಯರ್, ತುಮಕೂರು, ದಿ. 19-12-2023